ಶ್ರೀಮಂತಿ ಭಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಕರ್ನಾಟಕದ ಮಂಗಳೂರಿನಲ್ಲಿರುವ ಪುರಾತತ್ವ ಮತ್ತು ಭೂವೈಜ್ಞಾನಿಕ ಕಲಾಕೃತಿಗಳ ಸಂಗ್ರಹವಾಗಿದೆ. ಇದು ಕರ್ನಾಟಕದ ಪುರಾತತ್ವ ನಿರ್ದೇಶನಾಲಯ ಮತ್ತು ವಸ್ತುಸಂಗ್ರಹಾಲಯಗಳ ಘಟಕವಾಗಿದೆ. ಇದನ್ನು ೪ ಮೇ ೧೯೬೦ ರಂದು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಸ್ಥಾಪಿಸಿದರು. ಈ ಮ್ಯೂಸಿಯಂ ಕರ್ನಾಟಕದ ಕರಾವಳಿ ನಾಡು ಮಂಗಳೂರಿನಲ್ಲಿದೆ. == ಇತಿಹಾಸ == ಇಲ್ಲಿನ ಸಂಗ್ರಹಗಳ ಪ್ರಮುಖ ಭಾಗವು ಕರ್ನಲ್. ವಿ. ಆರ್. ಮಿರಾಜ್ಕರ್ ಅವರ ಸಂಗ್ರಹಣೆಯಾಗಿದೆ. ಅವರು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಲಾಹೋರ್‌ನಲ್ಲಿ ವೈದ್ಯಕೀಯ ಅಧಿಕಾರಿಯಾಗಿದ್ದರು. ವಸ್ತುಸಂಗ್ರಹಾಲಯವು ಅವರ ವಾಸದ ಮನೆಯಾಗಿತ್ತು. ೧೯೩೫ ರಲ್ಲಿ ಇಟಲಿಯ ಮಿಲಾನ್‌ನ ಕಟ್ಟಡ ರಚನೆಗಳಂತೆಯೇ ಅದೇ ನೀಲನಕ್ಷೆಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ಮಿಸಲಾಗಿದೆ ಮತ್ತು ಇದು ಹಡಗಿನಂತೆ ಕಾಣುತ್ತದೆ. ನಂತರ, ಈ ಮನೆಯನ್ನು ೧೯೫೫ ರಲ್ಲಿ ಕರ್ನಾಟಕ ಸರ್ಕಾರಕ್ಕೆ ದಾನ ಮಾಡಲಾಯಿತು. ಭಾರತದ ಒಳಗೆ ಮತ್ತು ಹೊರಗೆ ಅವರ ಪ್ರವಾಸಗಳಲ್ಲಿ ಸ್ವಾಧೀನಪಡಿಸಿಕೊಂಡ ಪ್ರಾಚೀನ ವಸ್ತುಗಳು ಮತ್ತು ಸಮಕಾಲೀನ ಮೇರುಕೃತಿಗಳ ಎಲ್ಲಾ ಸಂಗ್ರಹಣೆಗಳನ್ನು ಕೂಡ ಕರ್ನಾಟಕ ಸರ್ಕಾರಕ್ಕೆ ನೀಡಲಾಯಿತು. ಅದರ ನಂತರ, ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು ಮತ್ತು ಅವರ ತಾಯಿ ಶ್ರೀಮಂತಿ ಭಾಯಿ ಅವರ ಗೌರವಾರ್ಥವಾಗಿ ಹೆಸರಿಸಲಾಯಿತು. ಇದು ಪ್ರಾಚೀನ ನಾಗರಿಕತೆಗಳ ಸಂಸ್ಕೃತಿ ಮತ್ತು ಜೀವನಶೈಲಿ ಹಾಗೂ ಕಲೆ ಮತ್ತು ಕರಕುಶಲಗಳನ್ನು ಚಿತ್ರಿಸುವ ಪುರಾತನ ವಸ್ತುಗಳು ಮತ್ತು ಐತಿಹಾಸಿಕ ಸಂಗ್ರಹಗಳನ್ನು ಹೊಂದಿದೆ. == ಪ್ರದರ್ಶನ ಗ್ಯಾಲರಿಗಳು == ವಸ್ತುಸಂಗ್ರಹಾಲಯದ ಪ್ರದರ್ಶನಗಳು ತುಳುನಾಡಿನ ವಿಶಿಷ್ಟವಾದ ಭೂತಾರಾಧನೆಯ ವಿಗ್ರಹ, ಮುಗ(ಮುಖವಾಡ), ಪಾತ್ರೆಗಳನ್ನು ಒಳಗೊಂಡಿರುತ್ತವೆ. ಪ್ರಾಚೀನ ಶಿಲಾಯುಗ ಮತ್ತು ನವಶಿಲಾಯುಗದ ಕಲ್ಲಿನ ಉಪಕರಣಗಳು, ನಾಣ್ಯಗಳು, ಲೋಹದ ಪಾತ್ರೆಗಳು, ಮರದ ಪೀಠೋಪಕರಣಗಳು, ಸಂಗೀತ ಉಪಕರಣಗಳು, ಜನಾಂಗೀಯ ವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ರಕ್ಷಾಕವಚಗಳು. ಹಾಗೂ ಹರಪ್ಪ ಮತ್ತು ಮೊಹೆಂಜೊ-ದಾರೋ, ಗಾಂಧಾರ ಮತ್ತು ತಕ್ಷಶಿಲಾ ಸ್ಕೂಲ್ ಆಫ್ ಆರ್ಟ್, ವಾರಂಗಲ್, ನಾಗರ್ಜುನಕೊಂಡ, ಸಾರಾನಾಥ್, ಕೋನಾರ್ಕ್, ಕುಶಾನ, ಅಹಿಂಛತ್ರ, ತುಳುನಾಡು ಮತ್ತು ಸ್ಥಳೀಯ ಪ್ರದೇಶಗಳ ಪ್ರತಿಕೃತಿಗಳು. ಪ್ರಾಣಿಗಳ ಮುದ್ರೆಗಳು, ಮರದ ಫಲಕಗಳು, ದೈತ್ಯಾಕಾರದ ಮರದ ಪ್ರತಿಮೆಗಳು, ಪಿಂಗಾಣಿ ವಸ್ತುಗಳು, ಸಂಗೀತ ಉಪಕರಣಗಳು, ದೀಪಗಳು, ಗಡಿಯಾರ, ಮರದ ದೇವರ ಪ್ರತಿಮೆಗಳು ಮತ್ತು ಇತರ ಪ್ರಾಚೀನ ವಸ್ತುಗಳು. === ಚಿತ್ರಕಲೆ === ಪ್ರದರ್ಶನವು ಸಾಂಪ್ರದಾಯಿಕ ಉಡುಪುಗಳು, ಸಮಕಾಲೀನ ದೃಶ್ಯಗಳು, ಭಾವಚಿತ್ರಗಳು, ವಿವಿಧ ಗುರುತಿಸಲ್ಪಟ್ಟ ಮತ್ತು ಗುರುತಿಸದ ಕಲಾವಿದರಿಂದ ತೈಲ ಮತ್ತು ನೀರಿನ ಚಿತ್ರಕಲೆ ಎರಡರ ಸ್ವರೂಪವನ್ನು ಒಳಗೊಂಡಿದೆ. ಕಟ್ಟಡದ ಮೊದಲ ಮಹಡಿಯನ್ನು ಕರ್ನಲ್ ವಿ. ಆರ್. ಮಿರಾಜ್ಕರ್ ಅವರು ಮಾಡಿದ ಸಂಗ್ರಹಗಳಿಗೆ ಸಮರ್ಪಿಸಲಾಗಿದೆ. ಅವರು ಭಾರತದಿಂದ ಮತ್ತು ಚೀನಾ, ನೇಪಾಳ, ಚೆಕೊಸ್ಲೊವೇಕಿಯಾ, ಆಫ್ರಿಕಾ, ಡೆನ್ಮಾರ್ಕ್, ಪರ್ಷಿಯಾ, ಜರ್ಮನಿ, ಜಪಾನ್, ಟರ್ಕಿ, ಬ್ರಿಟನ್, ಇಟಲಿ, ಟಿಬೆಟ್, ರಷ್ಯಾ, ವೆನಿಸ್, ಪ್ಯಾರಿಸ್ ಮತ್ತು ಲಂಡನ್‌ನಿಂದ ಬೃಹತ್ ವೈವಿಧ್ಯಮಯ ಕರಕುಶಲ ವಸ್ತುಗಳನ್ನು ಸಂಗ್ರಹಿಸಿದ್ದರು. ಅವರ ಅನೇಕ ಸಮಕಾಲೀನ ಸಂಗ್ರಹಗಳು ಅನನ್ಯವಾಗಿವೆ ಮತ್ತು ಈಗ ಪುರಾತನ ತುಣುಕುಗಳಾಗಿವೆ. ಮರದ ಪೀಠೋಪಕರಣಗಳು, ಗಾಜಿನ ಫಲಕಗಳು, ಬೆಳ್ಳಿ ಮತ್ತು ದಂತದ ವಸ್ತುಗಳು, ಚಿಪ್ಪುಗಳು, ಸಿಗಾರ್ ಬಾಕ್ಸ್‌ಗಳು, ವಿವಿಧ ಲೈಟರ್‌ಗಳು, ಮರದ ವಸ್ತುಗಳು, ಗಾಜಿನ ವಸ್ತುಗಳು, ಲೋಹದ ವಸ್ತುಗಳು ಇತ್ಯಾದಿಗಳನ್ನು ಅವರು ವೈಯಕ್ತಿಕವಾಗಿ ಬಳಸುತ್ತಿದ್ದರು. === ಗಾಂಧೀಜಿ ಫೋಟೋ ಗ್ಯಾಲರಿ === ಗಾಂಧೀಜಿಯವರ ಫೋಟೋ ಗ್ಯಾಲರಿಯು ಗಾಂಧೀಜಿಯವರ ಅಪರೂಪದ ಛಾಯಾಚಿತ್ರಗಳ ಸಂಗ್ರಹಗಳನ್ನು ಪ್ರದರ್ಶಿಸುತ್ತದೆ. ಇದು ಗಾಂಧೀಜಿಯ ಜನನದಿಂದ ಪ್ರಯಾಣದ ಅಂತ್ಯದವರೆಗಿನ ಜೀವನ ಚಕ್ರವನ್ನು ಪ್ರತಿಬಿಂಬಿಸುತ್ತದೆ. ಆಫ್ರಿಕಾದಲ್ಲಿ ಜೀವನ, ರ‍್ಯಾಲಿಗಳು, ಅಸಹಕಾರ ಚಳುವಳಿಗಳು, ದಂಡಿ ಯಾತ್ರೆ, ಸತ್ಯಾಗ್ರಹ, ನೆಹರು, ಜಿನ್ನಾ, ಕಸ್ತೂರಬಾ, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ನಮ್ಮ ರಾಷ್ಟ್ರದ ಇತರ ಐತಿಹಾಸಿಕ ವ್ಯಕ್ತಿಗಳೊಂದಿಗೆ ಗಾಂಧಿಯನ್ನು ಚಿತ್ರಿಸುವ ಫೋಟೋಗಳು. ಗಾಂಧೀಜಿಯವರು ಆಂಡ್ರ್ಯೂಸ್, ವಾರ್ಧಾ ಮತ್ತು ಇತರರಿಗೆ ಬರೆದ ಪತ್ರಗಳ ಸಂಗ್ರಹಗಳು ಕೂಡ ಇಲ್ಲಿವೆ. === ಮಕ್ಕಳ ವಿಭಾಗ === ಮಕ್ಕಳ ವಿಭಾಗವು ಪ್ರದರ್ಶನದ ಬೊಂಬೆಗಳು, ಯಕ್ಷಗಾನ ಮತ್ತು ಭೂತಕೋಲದ ಗೊಂಬೆಗಳು, ಪಕ್ಷಿ ಮತ್ತು ಪ್ರಾಣಿಗಳ ಪ್ರತಿಮೆಗಳು, ವಿಮಾನಗಳು, ದೋಣಿ ಮಾದರಿಗಳು, ಛಾಯಾಚಿತ್ರಗಳು, ಮರದ ಮಾದರಿಗಳು, ತುಳುನಾಡಿನ ಜನಾಂಗೀಯ ಮತ್ತು ಭೂತಾರಾಧನೆಯ ಸಂಗ್ರಹವನ್ನು ಒಳಗೊಂಡಿದೆ. === ಕಲ್ಲುಗಳು === ಹೊರ ಆವರಣದಲ್ಲಿ ವೀರಗಲ್ಲು, ತುಳುನಾಡಿನ ಮಹಾ ಸತಿ ಕಲ್ಲು, ತುಳು, ಕನ್ನಡ ಶಾಸನಗಳು, ಸೈನಿಕರ ಪ್ರತಿಮೆಗಳು, ಜೈನ, ಸರ್ಪ-ನಾಗಕಲ್ಲುಗಳು ಮತ್ತು ಕ್ರಿ.ಶ. ೧೪ ರಿಂದ ೧೬ನೇ ಶತಮಾನದ ನಡುವೆ ತಯಾರಿಸಲ್ಪಟ್ಟ ಬೆಳ್ತಂಗಡಿಯ ಜಮ್ಲಾಬಾದ್ ಕೋಟೆಯಿಂದ ಸಂಗ್ರಹಿಸಲಾದ ಫಿರಂಗಿಗಳಿವೆ. == ಉಲ್ಲೇಖಗಳು ==